Wednesday 15 August 2018

ಈಶ್ವರನನ್ನು ಹುಡುಕಿದಾಗ!!

ನಿಶ್ವಿಕಾ ಒಮ್ಮೆ ಪ್ರಾಜೆಕ್ಟರ್ ಕಡೆ ದಿಟ್ಟಿಸಿ ನೋಡಿ ತನ್ನ ಪ್ರೆಸೆಂಟೇಷನ್ ಅದರ ಪರದೆ ಮೇಲೆ ಸ್ಪಷ್ಟವಾಗಿ ಮೂಡಿದ್ದನ್ನ ಖಾತ್ರಿ ಪಡಿಸಿಕೊಂಡಳು.
ತನ್ನ ದಪ್ಪ ಕಪ್ಪು ಫ್ರೇಮಿನ ಕನ್ನಡಕವನ್ನ ಸರಿಪಡಿಸಿಕೊಳ್ಳುತ್ತ ಆ ಕೋಣೆಯಲ್ಲಿ ಸಮಾಲೋಚನೆ ನಡೆಸಲು ಕರೆಸಿದ್ದ ತನ್ನ ಟೀಮ್ ಕಡೆ ತಿರುಗಿದಳು. ಮರುದಿನ ಅವಳ ಕಂಪನಿ ಇಪ್ಪತ್ತೈದು ಸೌಂದರ್ಯ ಉತ್ಪನ್ನಗಳನ್ನ ಆನ್ಲೈನ್ ಬಿಡುಗಡೆ ಮಾಡುವುದಕ್ಕೆ ತಯಾರಾಗಿತ್ತು. ಅದರ ಮೊದಲು ಈ ಮೀಟಿಂಗು ಅತ್ಯಂತ ಮಹತ್ವದ್ದಾಗಿತ್ತು.
ಅದಕ್ಕಾಗೇ ಬೆಳ್ಳಂಬೆಳ್ಳಗ್ಗಿನ ಒಂಭತ್ತು ಘಂಟೆಗೆ ಏಳೆಂಟು ಸದಸ್ಯರು ಅಲ್ಲಿ ಸೇರಿದ್ದರು. ಅದು ಅವಳ ಮೇಲಿನ ಭಯದಿಂದಲೋ ಅಥವಾ ಭಕ್ತಿಯಿಂದಲೋ ಗೊತ್ತಿಲ್ಲ.

ಇನ್ನೇನು ನಿಶ್ವಿಕಾ ತನ್ನ ಕೈಯಲ್ಲಿದ್ದ ವೈರ್ ಲೆಸ್ ಪ್ರೆಸೆಂಟರ್ ಅನ್ನು ಪರದೆ ಮೇಲೆ ಹಾಯಿಸಬೇಕನ್ನುವಷ್ಟರಲ್ಲಿ ಹೊರಗಿನ ಜಗುಲಿಯಲ್ಲಿ ಯಾರೋ ಜೋರು ಜೋರಾಗಿ ಮಾತಾಡಿದಂತೆ, ಯಾರನ್ನೋ ತಡೆದಂತೆ ಕೇಳಿಸಿತು. ನಿಶ್ವಿಕಾ ಗುಂಪಿನ ಅತ್ಯಂತ ಕಿರಿಯ ಉದ್ಯೋಗಿ ಕಡೆ ತಿರುಗಿ 'ಏನಾಗ್ತಿದೆ? ಹೋಗಿ ನೋಡಿ ಬಾ' ಎನ್ನುತ್ತಿದ್ದಂತೆ ಕೋಣೆಯ ಬಾಗಿಲು ದಢಾರನೆ ತೆರೆದುಕೊಂಡಿತು. ಅವಳು ತನ್ನ ಆಫೀಸಿನ ಹಿರಿಯ ಸೆಕ್ಯೂರಿಟಿ ಗಾರ್ಡ್ ಅನ್ನು 'ನನ್ನನ್ನು ಯಾರೂ ತಡಯಬೇಡಿ. ನಾನ್ಯಾರು ಗೊತ್ತಿಲ್ಲವೇ. ನಿಮಗೆಷ್ಟು ಧೈರ್ಯ ಕಿಶನ್ ಅವರೇ ನನ್ನನ್ನ ಮುಟ್ಟಲು' ಎಂದು ಹಿಂದಿಯಲ್ಲಿ ಜೋರಾಗಿ ದಬಾಯಿಸುತ್ತ ಕೋಣೆಯೊಳಗೆ ಒಳನೂಕಿಕೊಂಡು ಬರುತ್ತಿದ್ದ ವಶಿಷ್ಠನನ್ನು ಕಂಡು ಆಶ್ಚರ್ಯ ಚಕಿತಳಾದಳು.

ನಿಶ್ವಿಕಾ ಅವಳಿಗರಿವಿಲ್ಲದೆ 'ವಶೀ...' ಎಂದು ಉದ್ಘಾರ ಮಾಡುತ್ತಿದ್ದಂತೆ ಅವನು 'ನಾನು ನಿನ್ನ ಹತ್ತಿರ ಮಾತನಾಡಬೇಕು. ದಯವಿಟ್ಟು ಹೊರಗಡೆ ಬಾ' ಅಂದನು. ನಿಶ್ವಿಕಾ 'ಐ ಆಮ್ ಇನ್ ಮೀಟಿಂಗ್. ಕಿಶನ್ ಇವರನ್ನ ಹೊರಗಡೆ ಲೌಂಜ್ ಅಲ್ಲಿ ಕೂರಿಸಿ. ಒಂದು ತಾಸಿನಲ್ಲಿ ನಾನು ಬಂದು ಕಾಣುತ್ತೇನೆ' ಎನ್ನಲು ಸೆಕ್ಯೂರಿಟಿ ವಶಿಷ್ಠನನ್ನು ಹೊರಗಡೆ ಕರೆದೊಯ್ಯಲು ತಯಾರಾದನು. ಆಗ ವಶಿಷ್ಠ 'ನಿಂಗೊತ್ತಾ. ನಂದಿಲ್ಲಿ ಮುಗೀತು. ನಾನಿನ್ನಿಲ್ಲಿ ಇರುವುದಿಲ್ಲ. ಎಲ್ಲವನ್ನೂ ಬಿಟ್ಟು ಹೋಗುತ್ತಿದ್ದೇನೆ. ನಂಗಿದೆಲ್ಲ ಏನೂ ಬೇಡ' ಎಂದು ದಗ್ದನಾಗಿ ನುಡಿಯುತ್ತಾ ಬಾಗಿಲೆಡೆ ತಿರುಗಿದನು.

ನಿಶ್ವಿಕಾಳಿಗೆ ಆ ಹವಾನಿಯಂತ್ರಿತ ಕೋಣೆಯಲ್ಲೂ ಉಸಿರು ಕಟ್ಟಿದಂತಾಯಿತು. ಬಾಯೆಲ್ಲ ಒಣಗಿದಂತಾಗಿ ಮೈಯೆಲ್ಲಾ ಬೆವರತೊಡಗಿತು. ಕೂಡಲೇ ಚೇತರಿಸಿಕೊಂಡು 'ಒಂದು ನಿಮಿಷ ನಿಲ್ಲು. ನಾವು ಮಾತನಾಡೋಣ' ಅನ್ನುತ್ತಾ ಟೀಮ್ ಕಡೆ ತಿರುಗಿ 'ಒಂದೆರಡು ತಾಸಿನ ನಂತರ ಮೀಟಿಂಗ್ ಗೆ ಬನ್ನಿ. ಅಲ್ಲಿಯವರೆಗೆ ನಿಮಗೆ ನಿಯೋಜಿಸಿದ ಕೆಲಸ ಮುಗಿಸಿ' ಅಂದಳು.

ಅವರೆಲ್ಲ ಹೊರಗೆ ಹೋಗುತ್ತಿದ್ದಂತೆ ವಶಿಷ್ಠನೆಡೆ ಕಣ್ಣು ಹಾಯಿಸಿ 'ಏನು ನಿನ್ನ ಗಲಾಟೆ. ಬೆಳಗ್ಗೆ ಬೆಳಗ್ಗೆ ಈ ತರಹ ನನ್ನ ಕೆಲಸಕ್ಕೆ ತೊಂದರೆ ಬರುವುದು ನನಗಿಷ್ಟವಿಲ್ಲ. ಅದೇನು ಒದರಬೇಕೋ ಹೇಳಿ ಜಾಗ ಖಾಲಿ ಮಾಡು' ಎಂದು ಗರಮ್ ಆದಳು. ಅವನು 'ಹೇಳುವುದೇನಿದೆ. ಎಲ್ಲಾ ಮುಗೀತು. ನಾನು ನನ್ನ ಸಂಸ್ಥೆ ಮಾರುತ್ತಿದ್ದೇನೆ' ಎಂದು ಹಗುರವಾಗಿ ನಕ್ಕನು.
ಅವಳು ಒಂದು ಕ್ಷಣ ತನ್ನ ಕಿವಿಯನ್ನು ತಾನೇ ನಂಬದಾದಳು. ಕಣ್ಣನ್ನು ಕಿರಿದು ಮಾಡುತ್ತಾ 'ಇದು ಜೋಕು ಮಾಡೋ ಟೈಮ್ ಅಲ್ಲ ಮಿಸ್ಟರ್ ವಶಿಷ್ಠ. ನಾವೆಲ್ಲ ನಾಳೆ ಬೆಳಗ್ಗೆಯಾದರೆ ಪ್ರಾಡಕ್ಟ್ಸ್ ಬಿಡುಗಡೆ ಮಾಡೋ ಗಡಿಬಿಡಿಯಲ್ಲಿದ್ದೇವೆ. ದಯವಿಟ್ಟು ನೀನಿನ್ನು ಹೊರಡು' ಅಂದಳು. ಅದಕ್ಕೆ ಅವನು ಕಿವಿಗೊಡದೆ 'ನಿಶಿ... ನೀನು ಮೀಡಿಯಾ ವರದಿ ನೋಡಲಿಲ್ವ. ಒಂದು ವಾರ ಆಯ್ತು ಸುದ್ದಿ ಬಂದು. ಎಷ್ಟು ಚೆನ್ನಾಗಿ ನನ್ನನ್ನು ಹೊಗಳಿ ಛಾಪಿಸಿದ್ದಾರೆ' ಎಂದು ಕಹಿಯಾದ ಧ್ವನಿಯಲ್ಲಿ ಹೇಳಿ 'ಒಂದು ಕಾಲದಲ್ಲಿ ರಾಜನಂತೆ ಮೆರೆಯುತ್ತಿದ್ದ ವಶಿಷ್ಠ ಶರ್ಮಾನ ಅಧಿಪತ್ಯದ ಅಂತ್ಯ. ಅಲೋಹಾ ಆಡ್ ಅಂಡ್ ಮಾರ್ಕೆಟಿಂಗ್ ಕೋ. ದಿವಾಳಿ ಮತ್ತು ಗ್ರಾಹಕರಿಗೆ ಪಂಗನಾಮ' ಎಂದು ಓದುತ್ತಾ 'ಆಹಾ! ಎಷ್ಟು ವರ್ಣನೆ ಮಾಡಿದ್ದಾರೆ ನೋಡು' ಎಂದು ತನ್ನ ಮೊಬೈಲನ್ನು ಅವಳ ಮುಖದೆದುರು ಹಿಡಿದನು.

ನಿಶ್ವಿಕಾಳಿಗೆ ಒಮ್ಮೆಲ್ಲೇ ತಲೆ ತಿರುಗಿದಂತೆ ಅನಿಸಿ ಪಕ್ಕದಲ್ಲಿದ್ದ ಸೋಫಾದ ಮೇಲೆ ದೊಪ್ಪೆಂದು ಕುಳಿತಳು. 'ಡೈರೆಕ್ಟರ್ ಕೋಣೆ ಚೆನ್ನಾಗಿ ಕಟ್ಟಿಸಿಕೊಂಡಿದ್ದೀಯ' ಎಂದು ಸುತ್ತಮುತ್ತ ತನ್ನ ಬೆರಗಿನ ಕಣ್ಣುಗಳಲ್ಲಿ ನೋಡುತ್ತಾ ವಶಿಷ್ಠ ತಾನೂ ಸೋಫಾದ ಇನ್ನೊಂದು ಅಂಚಿನಲ್ಲಿ ಕುಳಿತನು. ಅವಳು ಈ ಎರಡು ವರ್ಷಗಳಲ್ಲಿ ಅದೇ ಮೊದಲ ಬಾರಿಗೆ ಅನ್ನುವಂತೆ ತಾನೂ ಆ ಕೋಣೆಯನ್ನು ನೋಡಲಾರಂಭಿಸಿದಳು. ಅದೊಂದು ಅತ್ಯಂತ ವಿಶಾಲವಾದ ಸುಂದರವಾಗಿ ಅಲಂಕರಿಸಲ್ಲ್ಪಟ್ಟ ಕೋಣೆಯಾಗಿತ್ತು.
ಒಂದು ಕಡೆ ಗೋಡೆ ಪೂರ್ತಿ ಗಾಜಿನಿಂದ ಮಾಡಲ್ಪಟ್ಟಿತ್ತು. ಅದರೆದುರು ಅವಳ ಕೆಲಸದ ಮೇಜು ಖುರ್ಚಿಗಳಿದ್ದವು. ಸ್ವಲ್ಪ ದೂರದಲ್ಲೇ ಎದುರಿಗೆ ಎಂಟು ಹತ್ತು ಜನರು ಒಟ್ಟಿಗೆ ಕುಳಿತುಕೊಳ್ಳಲು ಸಾಧ್ಯವಾಗುವ ತೇಗದ ಮರದ ದೊಡ್ಡದೊಂದು ಮೇಜಿತ್ತು. ಅಲ್ಲೇ ಎಲ್ಲಾ ಮಹತ್ವದ ಮೀಟಿಂಗ್ ನಡೆಯುತ್ತಿದ್ದವು. ಇವರಿಬ್ಬರು ಕೂತಿದ್ದ ಸೋಫಾ ಅವಳ ಕೆಲಸದ ಮೇಜಿನ ಪಕ್ಕಕ್ಕಿತ್ತು. ಅದರ ಹಿಂದೆ ಒಂದು ಸಣ್ಣ ಕಪಾಟಿನ ಮೇಲೆ ಕಾಫಿ ಮಷೀನ್ ಇತ್ತು. ಆ ಕಪಾಟಿನ ಪಕ್ಕ ಒಂದು ಮ್ಯಾಗಝಿನ್ ಗಳನ್ನ ಇಡುವ ಬೋರ್ಡ್ ಇತ್ತು. ಕೋಣೆಯ ಮುಖ್ಯ ದ್ವಾರದ ಪಕ್ಕ ಒಂದು ಬಾತ್ ರೂಮ್ ಕೂಡಾ ಇತ್ತು. ಕೋಣೆಯ ಗೋಡೆಗಳ ಮೇಲೆ ಜಾಣ್ಮೆ ಬರಹಗಳಿದ್ದ ಪಟಗಳಿದ್ದವು. ಒಟ್ಟಾರೆ ಆ ಕೋಣೆ ತುಂಬಾ ಮಹತ್ವಾಕಾಂಕ್ಷಿಯಾಗಿತ್ತು.

ನಿಶ್ವಿಕಾಳಿಗೆ ಇದ್ದಕ್ಕಿದ್ದಂತೆ ವಶಿಷ್ಠ ಆ ಕೋಣೆಯಲ್ಲಿ ತನ್ನ ಜೊತೆ ಕೂತಿರುವುದು ನೆನಪಿಗೆ ಬಂದು 'ಇದೆಲ್ಲಾ ನಿನ್ನ ಕೃಪೆ. ನಿನ್ನಿಂದಾಗಿ ಮಾಡಿಕೊಂಡಿದ್ದು. ನೀನು ಇಲ್ಲದ್ದಿದ್ದರೆ ಇಷ್ಟೆಲ್ಲಾ ನನ್ನ ಕೈಯಲ್ಲಿ ಮಾಡಲಾಗುತ್ತಿರಲಿಲ್ಲ. ನಾನು ಕೆಲಸ ಮಾಡುತ್ತಿರುವುದೇ ನಿನ್ನಿಂದಾಗಿ. ಅಂತದರಲ್ಲಿ ನೀನು ಎಲ್ಲಾ ಬಿಟ್ಟು ಹೋಗುವ ವಿಚಾರ ಮಾಡುತ್ತಿದ್ದೀಯಲ್ಲ. ನಿನಗೆ ತಲೆಗಿಲೆ ಕೆಟ್ಟಿದೆಯೇ' ಎಂದು ನಡುಗುವ ಸ್ವರದಲ್ಲಿ ಕೇಳಿದಳು. ಅವನು 'ನನ್ನನ್ನು ನಂಬಬೇಡ. ನಾನು ಯಾರಿಗೂ ಮಾರ್ಗದರ್ಶಿಯಾಗಲು ಲಾಯಕ್ಕಿಲ್ಲ. ಕಣ್ಮುಂದೆ ಮೋಸ ನಡೀತಾ ಇದ್ದರೂ ಸುಮ್ಮನಿದ್ದುದ್ದಕ್ಕೆ ಈ ಶಿಕ್ಷೆ ಸಿಕ್ಕಿದೆ ಬಿಡು. ಕಂಪೆನಿ ಮುಳುಗುತ್ತಾ ಇದೆ ಎಂದು ಗೊತ್ತಾಗಿ ಜಾಗೃತನಾಗುವವರೆಗೆ ತಡವಾಯಿತು. ಒಳಗೊಳಗಿಂದ ಎಲ್ಲಾರೂ ಹಣ ಕೊಳ್ಳೆಹೊಡೆದರು. ನನಗೆ ಮೋಸ ಮಾಡಿದರು' ಅಂದು ಬಿಕ್ಕಿಬಿಕ್ಕಿ ಅಳಹತ್ತಿದನು. ಅವಳಿಗೆ ಏನು ಹೇಳಬೇಕೆಂದು ತೋಚದೆ ಸುಮ್ಮನೆ ಸೋಫಾದಿಂದೆದ್ದು ಒಂದು ಕಪ್ಪಿನಲ್ಲಿ ಕಾಫಿ ಬೆರೆಸಿ ಅವನ ಕೈಯಲ್ಲಿ ಇರಿಸಿದಳು. ತಾನು ಮಗದೊಂದು ಕಪ್ಪನ್ನು ಹಿಡಿದುಕೊಂಡು ಹೈಹೀಲ್ಡ್ ಬಿಚ್ಚಿ ಅವನ ಎದುರು ನೆಲದ ಮೇಲೆ ಹಾಸಿದ್ದ ರಗ್ಗಿನ ಮೇಲೆ ಕುಳಿತಳು.

ಮತ್ತೊಮ್ಮೆ ಅಲ್ಲಿ ಮೌನ ಆವರಿಸಿತು. ನಿಶ್ವಿಕಾಳ ತಲೆಯಲ್ಲಿ ತನ್ನ ಜೀವನದಲ್ಲಿ ಹಿಂದೆ ನಡೆದುಹೋದ ಅದೆಷ್ಟೋ ಆಗುಹೋಗುಗಳು ಒಂದರ ಹಿಂದೆ ಒಂದರಂತೆ ನೆನಪಿಗೆ ಬರಹತ್ತಿದವು. ವಶಿಷ್ಠನ ಜೊತೆ ಎಂಟನೇ ತರಗತಿಯಿಂದ ಎಂ.ಬಿ.ಎ ಮುಗಿಸಿ ಎರಡು ವರ್ಷ ಕೆಲಸ ಮಾಡುವವರೆಗಿನ ದಿನಗಳು; ಅವನ ಮೇಲಿನ ಕಳಕಳಿ ಪ್ರೀತಿಗೆ ತಿರುಗಿ ಅದನ್ನು ಅವನಲ್ಲಿ ಪ್ರಸ್ತಾಪಿಸಿದ ದಿನಗಳು; ಅವನು ತಾನು ತನ್ನದೇ ಜಾಹೀರಾತು ಸಂಸ್ಥೆ ತೆಗೆಯುವವನಿದ್ದೇನೆ. ಸದ್ಯಕ್ಕೆ ಮದುವೆಗೆ, ಅವಳಿಗೆ ತನ್ನ ಬಳಿ ಟೈಮ್ ಇಲ್ಲ ಅಂದಿದ್ದು; 'ಹೋಗಲಿ, ನನ್ನನ್ನು ನಿನ್ನ ಕಂಪೆನಿಯ ಪ್ರಮುಖ ಸ್ಥಾನಕ್ಕೆ ತೆಗೆದುಕೋ. ಆ ರೀತಿಯಲ್ಲಾದರೂ ನಿನ್ನ ಜೊತೆ ಇರುತ್ತೇನೆ' ಎಂದು ಅವಳು ಬೇಡಿಕೊಂಡದ್ದು; ಅದಕ್ಕುತ್ತರವಾಗಿ ಅವನು 'ನೀನಿನ್ನೂ ಸಣ್ಣವಳು. ನಿನಗೆ ಇದೆಲ್ಲ ತಿಳಿಯುವುದಿಲ್ಲ' ಅಂದಿದ್ದು; ಇವಳು ಕೂಡಲೇ ಅಪ್ಪ ಅಮ್ಮ ನೋಡಿದ ಶ್ರೀಮಂತ ಹುಡುಗನ ಮದುವೆ ಆಗಿದ್ದು; ಮದುವೆ ಆದ ಬೆನ್ನಲ್ಲೇ ವಶಿಷ್ಠನಿಗೆ ಸವಾಲು ಒಡ್ಡುವಂತೆ ತನ್ನದೇ ಆದ ಸೌಂದರ್ಯ ಉತ್ಪನ್ನಗಳ್ಳನ್ನು ಮಾರುವ ಕಂಪನಿ 'ಬ್ಯೂಟಿಪ್ರೊ.ಕಾಮ್' ಹುಟ್ಟುಹಾಕಿದ್ದು; ಮೊದಮೊದಲಿಗೆ ಅವಳು ತನ್ನ ಸಂಸ್ಥೆಯನ್ನು ಅಸ್ತಿತ್ವದಲ್ಲಿರಿಸಲು ಹಗಲುರಾತ್ರಿ ಒಬ್ಬಂಟಿಯಾಗಿ ಕಷ್ಟಪಟ್ಟಿದ್ದು; ತನ್ನ ಕೈಕೆಳಗೆ ಕೆಲಸ ಮಾಡುವವರು ಒಳ್ಳೆಯವರಿದ್ದದ್ದರಿಂದ ಅವಳ ಕಂಪನಿಯೂ ಸ್ವಲ್ಪಮಟ್ಟಿಗೆ ಹೆಸರುವಾಸಿಯಾಗಿದ್ದು; ಹೀಗೆಲ್ಲ ನಡೆದು ಐದಾರು ವರುಷಗಳೇ ಕಳೆದು ಹೋಗಿದ್ದು; ಇವೆಲ್ಲವನ್ನು ನೆನೆಸಿಕೊಂಡು ಎದೆಯಲ್ಲಿ ಒಂದು ರೀತಿಯ ಛಳಕ್ಕು ಮೀಟಿತು.

ಅವಳು ಈಗ ತನ್ನೆದುರಿಗೆ ಹತಾಶನಾಗಿ ಕೈಚೆಲ್ಲಿ ಕುಳಿತ ಒಂದು ಕಾಲದಲ್ಲಿ ತನ್ನ ಪ್ರಿಯಕರನಾಗಿದ್ದ, ತನ್ನ ಆದರ್ಶವಾಗಿದ್ದ ವಶಿಷ್ಠನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಹತ್ತಿದಳು. ಒಂದೆರಡು ನಿಮಿಷ ಒಬ್ಬರನ್ನೊಬ್ಬರು ದುರುಗುಟ್ಟಿ ನೋಡಿ ಒಂದೇ ಸವನೇ ಸಂಭಾಷಣೆ ಚುರುಕುಗೊಳಿಸಿದರು. ಅವಳು 'ಬೇರೆ ಕೆಲಸ ಹುಡುಕು.  ಬುದ್ಧಿವಂತನಿದ್ದೀಯೆ'. ಅವನು 'ಇಷ್ಟವಿಲ್ಲ'. ಅವಳು 'ಇಲ್ಲಿಗೆ ಬಾ. ನನ್ನ ಜೊತೆ ಸೇರು'. ಅವನು 'ಬೇಡ. ಇದು ನೀನು ಸಾಕಿದ ಕೂಸು. ನಿನ್ನ ಕನಸು ಹಾಳು ಮಾಡಲಾರೆ'. ಅವಳು 'ಅಮ್ಮನಿಗೆ ಹೇಳಿದ್ದೀಯಾ? ಊರಿಗೆ ಹೋಗಿ ಸ್ವಲ್ಪ ದಿವಸ ಇರು'. ಅವನು 'ಇಲ್ಲ. ಊರು ಬೇಡ. ಮತ್ತೆ ಮೋಹಪಾಶಕ್ಕೆ ಒಳಗಾಗುವ ಭಯ'. ಅವಳು 'ಮತ್ತಿನೇನು ಪ್ಲಾನು ನಿಂದು'. ಅವನು 'ಸಧ್ಯಕ್ಕೆ ಏನೂ ಇಲ್ಲ'. ಅವಳು 'ಮತ್ತೇ ಎಲ್ಲಿಗೋ ಹೋಗುತ್ತಿ ಅಂದೇ'. ಅವನು 'ಹಾಂ. ಹಿಮಾಲಯಕ್ಕೆ'. ಅವಳು 'ಅಲ್ಲಿ ಏನಿದೆ ಲೈಫು?'. ಅವನು 'ಈಶ್ವರನಿದ್ದಾನೆ. ಕಾಯುತ್ತಾನೆ'. ಅವಳು 'ನೀನ್ಯಾವಾಗ ದೇವರನ್ನು ನಂಬ ಹತ್ತಿದಿ?'. ಅವನು 'ಅವನೇ ಕಣ್ತೆರೆಸಿದಾಗ'. ಅವಳು 'ನೀನು ತಲೆಮರೆಸಿಕೊಳ್ಳುತ್ತಿದ್ದೀಯಾ?'. ಅವನು 'ಇಲ್ಲ. ಮನಃಶಾಂತಿ ಕಂಡುಕೊಳ್ಳುತ್ತಿದ್ದೇನಷ್ಟೆ'. ಅವಳು 'ಕೈಖರ್ಚಿಗೆ ಏನು ಮಾಡುವೆ?'. ಅವನು 'ಸ್ವಲ್ಪ ಸೇವಿಂಗ್ಸ್ ಇದೆ. ಆಹಾರ ನೀರಿಗೆ ಧರ್ಮಛತ್ರಗಳಿವೆ'. ಅವಳು 'ಇನ್ನೂ ನಿನ್ನ ವಯಸ್ಸು ಮೂವತ್ತಷ್ಟೇ. ತುಂಬಾ ದೊಡ್ಡ ಜೀವನ ಬಾಕಿ ಇದೆ. ಇಷ್ಟು ಬೇಗ ಸನ್ಯಾಸಿ ಆಗುತ್ತೀಯೆ?'. ಅವನು 'ಅಷ್ಟೆಲ್ಲಾ ಮುಂದಿನ ಬಗ್ಗೆ ವಿಚಾರ ಮಾಡಿಲ್ಲ. ಸಾಧು ಸಂತನಾಗುವಷ್ಟು ವಿಶಾಲ ಹೃದಯ ನನಗಿಲ್ಲ'. ಅವಳು 'ನಾನೂ ಬರುತ್ತೇನೆ'. ಅವನು 'ಕೆಲವೊಮ್ಮೆ ಪ್ರಯಾಣ ಒಬ್ಬರೇ ನಡೆಸಬೇಕು'.

ಅವನು ಮತ್ತೆ ಅಂತರ್ಮುಖಿಯಾದನು. ಅವಳ ಕಣ್ಣಲ್ಲಿ ಸಣ್ಣದೊಂದು ನೋವಿನ ನೀರು ಜಿನುಗಿತು. ಅದು ಅವನಿಗೆ ಕಾಣಬಾರದೆಂದು ಕೂಡಲೇ ತನ್ನ ಮುಖವನ್ನ ಬಲಕ್ಕೆ ತಿರುಗಿಸಿದಳು. ಹೊರಗಡೆ ಬೆಳಗ್ಗಿನಿಂದ ಎಡಬಿಡದೆ ಜಿಟಿಜಿಟಿ ಸುರಿಯುತ್ತಿದ್ದ ಆದ್ರಾ ಸೋನೆ ಆಗಷ್ಟೇ ನಿಂತದ್ದು ಗಾಜಿನ ಮೂಲಕ ಕಾಣುತ್ತಿತ್ತು.

- ಶಿಲ್ಪ ಶಾಸ್ತ್ರಿ

Wednesday 8 August 2018

ಶೆಹರ್

ಕಥೆ ಹೇಳುವೆ ಒಂದು ಕಾಲದ ಕಥೆ ಹೇಳುವೆ
ಯಾವಾಗ ಊರಿಗೂರೇ ಮಲಗಿತ್ತು ಆ ರಾತ್ರಿ ಸುಖವಾಗಿ

ನಾಲ್ಕೂ ದಿಕ್ಕುಗಳಲ್ಲಿ ಸೂರ್ಯಾಸ್ತದ ಕೆಂಪೇರಿತ್ತು
ಪ್ರೇರಣಾತ್ಮ ಶಾಲು ಹೊದ್ದು ರಕ್ತದೋಕುಳಿಯಲ್ಲಿ ಮಿಂದಿತ್ತು
ಎಲ್ಲೆಲ್ಲೂ ಕೆಂಪು ಪುಡಿ ಬಣ್ಣವ ಎರಚ್ಚಿತ್ತು
ಅಷ್ಟರಲ್ಲಿ ದೊಡದ್ದೊಂದು ವಿಪತ್ತು ಬಂದಿತ್ತು

ಯಾವ ರಾತ್ರಿ ಮುಗಿಲಿನಿಂದ ರಕ್ತ ಸುರಿದಿತ್ತು
ಯಾವ ರಾತ್ರಿ ಊರಲ್ಲಿ ರಕ್ತ ಹರಿದಿತ್ತು

ಇಡೀ ಊರೇ ಒದ್ದೆಯಾಯಿತು ಧರೆಯಲ್ಲಿ ವೃಷ್ಟಿಯಾಯ್ತು
ಮಾನವೀಯತೆ ತೋಯ್ದು ತೊಪ್ಪೆಯಾಯಿತು
ಇಡೀ ಜಗತ್ತೇ ಕೇಳಿತು ಇಷ್ಟೆಲ್ಲಾ ಆಗುವಾಗ ಅಣ್ಣತಮ್ಮಂದಿರಾ, ನಿಮ್ಮ ಊರು ಕಣ್ಮುಚ್ಚಿ ಯಾಕೆ ಮಲಗಿತ್ತು
ಊರಿಗೂರೇ ಹೇಳಿತು ನಿದ್ದೆ ಅಷ್ಟು ಜೋರಿತ್ತು
ಯಾವ ರಾತ್ರಿ ಮುಗಿಲಿನಿಂದ ರಕ್ತ ಸುರಿದಿತ್ತು
ಯಾವ ರಾತ್ರಿ ಊರಲ್ಲಿ ರಕ್ತ ಹರಿದಿತ್ತು

ಮೌನ ಒಂಟಿಯಾಗಿತ್ತು ಅಜ್ಞಾತ ನಿಶಬ್ದತೆ
ಜೀವ ಹಿಂಸಾತ್ಮಕ ತಿರುವು ಪಡೆಯಿತು
ಅದೆಷ್ಟೋ ಸಂಖ್ಯೆಯಲ್ಲಿ ನೆರಳುಗಳು ಬಿದ್ದವು
ತಮ್ಮ ಜಡ್ಡು ಕೂದಲು ಕೆದರಿಕೊಂಡು
ಪಿಶಾಚಿಗಳಿಂದ ಅಂಧಕಾರ ಹೆಚ್ಚಿತು
ಜೀವ ಪೈಶಾಚಿಕ ನ್ರತ್ಯದಿಂದ ಕಂಪಿಸಿತು
ಅಲ್ಲೆಲ್ಲೋ ಚಪ್ಪಲಿ ಕಟಕಟ ಮಾಡುತ್ತಿದೆ
ಅಲ್ಲೆಲ್ಲೋ ಕೆಂಡ ಚಟಪಟ ಸುಡುತ್ತಿದೆ
ಇಲ್ಲೆಲ್ಲೋ ಜೀರುಂಡೆಯ ಜೀಗುಡೋ ಶಬ್ಧ
ಅಲ್ಲೆಲ್ಲೋ ನಳದಿಂದ ನೀರು ಟಪಟಪ ಬೀಳುತಿದೆ
ಅಲ್ಲೆಲ್ಲೋ ಖಾಲಿ ಖಾಲಿ ಕಿಟಕಿಗಳಿವೆ
ಅಲ್ಲೆಲ್ಲೋ ಕಪ್ಪಾದ ಹೊಗೆಗೊಳವೆ
ಇಲ್ಲೆಲ್ಲೋ ಗುಂಪಾಗಿ ನಲುಗುತ್ತಿರುವ ಮರಗಳು
ಇಲ್ಲೆನನ್ನೋ ಮಾಡಿನ ಗೋಡೆಯೊಳಗಡೆ ಇಡಲಾಗಿದೆ

ರೇ ರೇ ರೆ ರೇರೆ...

ಶೂನ್ಯ ತುಂಬಿದ ಕತ್ತಲೆ ದಾರಿ ಕೊನೆಯಲ್ಲಿ ಬೀದಿ ನಾಯಿ ಕೂಗಿದಾಗ
ಮಸುಕಾದ ಹಳದಿ ದಾರಿದೀಪದ ಕೆಳಗೆ ಏನೇನೋ ನಡೆದಾಗ
ಯಾವುದೋ ನೆರಳು ತನ್ನಿರವನ್ನು ಬಚಾವು ಮಾಡುತ್ತಾ ಬೇರಾವುದೋ ನೆರಳಲ್ಲಿ ಕಳೆದು ಹೋದಾಗ
ಸೇತುವೆಯ ಕಂಬಗಳನ್ನ ಕಾರಿನ ಬಿಸಿದೀಪ ನಿಧಾನವಾಗಿ ತೊಳೆದಾಗ
ನಮ್ಮೂರು ನಿದ್ದೆ ಮಾಡುತ್ತದೆ
ಘಾಡವಾಗಿ ನಿದ್ದೆ ಮಾಡುತ್ತದೆ
ಮೈಮರೆತು ನಿದ್ದೆ ಮಾಡುತ್ತದೆ

ಯಾವಾಗ ಊರು ನಿದ್ದೆ ಮಾಡುತ್ತದೆ ಆಗ ನಿಮಗೆ ಗೊತ್ತೇ ಏನೇನು ಆಗುತ್ತದೆ
ಇಲ್ಲಿ ಶವಗಳು ಜೀವಂತ ಇಲ್ಲಾ ಸತ್ತು ಏಳುತ್ತವೆ
ಅಲ್ಲಿ ಜೀವಗಳು ಕಳೆಯುತ್ತವೆ
ಇಲ್ಲಿ ಧರ್ಮದ ಭಿಕ್ಷೆ ಬೇಡುವ ಕೂಗು ಕೇಳುತ್ತದೆ
ಆ ಆಸ್ಪತ್ರೆಯಲ್ಲಿ ಕಣ್ಣಲ್ಲಿ ನಿಯಂತ್ರಣ ತಪ್ಪಿದ ಮರುಕ್ಷಣವೇ ಬಿಸಿಯಾದ ಮಾಂಸದ ಮುದ್ದೆ ಕೈಯಲ್ಲಿ ಬೀಳುತ್ತದೆ

ಇಲ್ಲಿ ಮೈಮಾರಾಟದ ಜಟಾಪಟಿ ಕೊಳ್ಳುವಿಕೆಯಲ್ಲಿ ತಕರಾರು ಎದ್ದಿದೆ
ಅಲ್ಲಿ ಕಣ್ಣುಗಳೆರಡು ರಕ್ತಸಿಕ್ತ ಗಾಯಗಳನ್ನು ನಿಂತು ನೋಡುತ್ತಿವೆ
ಇದರಿಂದಾಗಿ ರಂಗುರಂಗಿನ ಅರಮನೆಗಳಲ್ಲಿ ಸಂಭಾವನೆ ಸಿಗುತ್ತದೆ
ನಶೆಯಲ್ಲಿರುವ ಜಗುಲಿಗಳಲ್ಲಿ ಕ್ರೂರ ಜೋಕು ಹುಟ್ಟುತ್ತದೆ
ಅರೆನಗ್ನ ದೇಹಗಳ ದುರ್ಗಂಧ ಸುಂದರ ಲಿಪಿಯಂತೆ ತೋರುತ್ತದೆ
ಅಂಡೆಪಿರ್ಕಿ ಮುಖಗಳಲ್ಲಿ ಕೆಡುಕು ಮಾಡುವ ಆಸೆ ಕಾಣುತ್ತದೆ

ಅವರು ಗಾಬರಿಯಾಗಿ ಯಾವಾಗೆಲ್ಲ ಹೀಗಾಗುತ್ತದೆ ಅಂದಾಗ
ನಾವು ಹೇಳುತ್ತೇವೆ ಹೀಗಾಗುತ್ತದೆ ಯಾವಾಗ್ಯಾವಾಗ
ನಮ್ಮೂರು ನಿದ್ದೆ ಮಾಡುತ್ತದೆ
ಘಾಡವಾಗಿ ನಿದ್ದೆ ಮಾಡುತ್ತದೆ
ಮೈಮರೆತು ನಿದ್ದೆ ಮಾಡುತ್ತದೆ

ಹಿಂದಿ ಮೂಲ : ಪಿಯೂಷ್ ಮಿಶ್ರ
ಕನ್ನಡ ಅನುವಾದ : ಶಿಲ್ಪ ಶಾಸ್ತ್ರಿ 

Tuesday 7 August 2018

ಗಂಡು ನೋಡುವ ವೇಳೆ (ಗೊಡ್ಡು ಹರಟೆ)

'ಶ್ಯಾಂಭಟ್ರ ಮಗ್ಳು ವಿಷ ಕುಡಿಜಡೆ. ಗೊತ್ತಾತ್ತನೆ?' ಎಂದು ಗಂಟಲು ಹರಿದು ಹೋಗುವ ಹಾಗೆ ಅರಚುತ್ತಾ ಪಕ್ಕದ ಮನೆಯ ಗಿರಿಜಕ್ಕ ನಮ್ಮ ಮನೆ ಗೇಟನ್ನು ದಢಾರೆಂದು ದೂಡಿಕೊಂಡು ಒಳ ನುಗ್ಗಿದರು. ಅಮ್ಮ ಮತ್ತು ಅಜ್ಜಿ ಮನೆಯ ಹಜಾರದಲ್ಲಿ ಹಸಿ ಶೇಂಗಾ ಬಿಡಿಸುತ್ತ ಕುಳಿತಿದ್ದವರು ಒಮ್ಮೆಲೇ ಕಕ್ಕಾಬಿಕ್ಕಿಯಾಗಿ ಗಿರಿಜಕ್ಕನ ಕಡೆಗೆ ತಿರುಗಿದರು. ಅಜ್ಜಿ 'ಎಂತಾತಡೆ ಅದ್ಕೆ. ದಷ್ಟ ಪುಷ್ಟವಾಗಿ ಬೆಳ್ಕಂಡು ಇತ್ತಲೆ ಅದು' ಎಂದು ಧ್ವನಿ ಏರಿಸಿದರು. ಅಮ್ಮ ತಾವೂ ಕಮ್ಮಿ ಇಲ್ಲವೆಂದು 'ಎಂತಾದ್ರೂ ಲವ್ವು ಗಿವ್ವು ಮಾಡ್ಕಂಡಿಕ್ಕು. ಎಲ್ಲೋ ಕೈಕೊಟ್ನಾ ಹೇಳಿ ಪುಣ್ಯಾತ್ಮ' ಎಂದು ಉರಿವ ಬೆಂಕಿಗೆ ತುಪ್ಪ ಸೇರಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಗಿರಿಜಕ್ಕ 'ಹೌದಡೆ , ಮದ್ವೆ ಮಾಡಿಕಂಬುಲೆ ತಯಾರು ಇಲ್ಲ್ಯಡ ಮಾಣಿ. ಆದ್ರೆ ಹೊಟ್ಟೇಲಿ ಅವಂದೇ ಮಗು ಬೆಳಿತಾ ಇತ್ತು ಹೇಳಿ ಜನ ಆಡ್ಕತ್ತ ಇದ್ದ' ಅಂದರು.
'ಹೌದನೇ ಈ ಹೆಣ್ಮಕ್ಕಳೇ ಹೀಂಗೆ. ಅಪ್ಪ ಅಮ್ಮ ತಲೆ ತಗ್ಸ್ಕಂಡು ತಿರುಗುವಾಂಗೆ ಮಾಡಿದ್ವಲೇ. ಒಂದು ಚೂರು ಜವಾಬ್ದಾರಿ ಬೇಡದ' ಅಂದು ಸಿಡುಕಿದರು ಅಮ್ಮ. ಗಿರಿಜಕ್ಕ ತಮ್ಮ ಸುದ್ದಿ ಮುಂದುವರೆಸುತ್ತ 'ಮಗು ಸತ್ತೋಜಡ ವಿಷದ ಹೊಡ್ತಕ್ಕೆ. ಪಾಪ. ಎಂತ ದುರದೃಷ್ಟ ನೋಡು ಅದ್ರದ್ದು' ಅಂದು ಲೊಚಗುಟ್ಟಿದರು.
ಜನ ಇಂತಹ ಗುಲ್ಲು ಮಾತನ್ನ ಒಂದು ಚೂರು ಸುಳಿವು ಸಿಕ್ಕುದರೂ ಸಾಕು ದೊಡ್ಡದು ಮಾಡುತ್ತಾರೆ.

ಮನೆ ಎದುರಿನ ಅಂಗಳದಲ್ಲಿ ಹಾಕಿದ ತೂಗುಯ್ಯಾಲೆಯಲ್ಲಿ ಕುಳಿತು ಈ ಭಾವಾತಿರೇಕ ಮಾತುಕತೆ ನೋಡುತ್ತಿದ್ದ ನನ್ನ ಕಡೆ ತಿರುಗಿ ಅಮ್ಮ 'ನಿಂಗು ಯಾರಾದ್ರೂ ಇದ್ರೆ ಈಗ್ಲೇ ಹೇಳೇ. ನಾಳೆ ಮದೀ ಟೈಂಅಲ್ಲಿ ಹೇಳುದಲ್ಲ' ಅಂದರು. ಅವರ ಮಾತಿಗೇನು ಸ್ಪಂದಿಸದೆ ಪೇರಳೆ ಹಣ್ಣು ತಿನ್ನುತ್ತಿದ್ದ ನನ್ನನ್ನು ನೋಡಿ ಅಜ್ಜಿ 'ನಂಗಳ ಮನೆ ಮಕ್ಕೋ ಎಲ್ಲಾ ಒಳ್ಳೆಯವೇ. ಹಾಂಗೆಲ್ಲ ಭಾನಗಡಿ ಮಾಡಕಂಬವು ಅಲ್ದಪ್ಪ. ಛಲೋ ಸಂಸ್ಕಾರ, ರೀತಿ ನೀತಿ, ನಡತೆ, ಗುಣ ಎಲ್ಲಾ ಕಲ್ಸಿ ಕೊಟ್ಟಿದ್ವಲ' ಎಂದು ಬಾಯೆಳೆದರು.
ಗಿರಿಜಕ್ಕ ಅಜ್ಜಿ ಮಾತಿಗೆ ಹೌದೆಂದು ತಲೆ ಹಾಕಿದರೂ ಅಮ್ಮ ಮಾತ್ರ ನನ್ನೆಡೆಗೆ ಸಂಶಯದಲ್ಲಿ ನೋಡುತ್ತಾ ಶೇಂಗಾ ಕುಟ್ಟುತ್ತಿದ್ದರು.

ನಾನು ನನ್ನ ಕಣ್ಣನ್ನು ಅಲ್ಲಿಂದ ಕಿತ್ತು ಎಡಬದಿಯ ಅಡಿಕೆ ತೋಟದ ಕಡೆಗೆ ಹರಿಸಿದೆ. ಎಲ್ಲೆಂದರಲ್ಲಿ ಹಸಿರು ಹೂವು ಹಣ್ಣು ಕಾಯಿ ತುಂಬಿಕೊಂಡಿರುವ ಆ ಸುಂದರ ನೋಟ ಮನಸ್ಸಿನ ತಳಮಳಕ್ಕೆ ಒಂದು ರೀತಿ ಶಾಂತಿ ಕೊಟ್ಟಿತು. ನಮ್ಮ ಮನೆಯನ್ನು ಹಿಡಿದು ಒಂದು ಹತ್ತು ಹದಿನೈದು ಮನೆಗಳು ಸಾಲಾಗಿ ಒಂದರ ಪಕ್ಕಕ್ಕೆ ಒಂದರಂತೆ ನಿಂತಿದ್ದವು. ಎದುರಿಗೆ ಅವರವರ ಭಾಗದ ತೋಟ. ಎಲ್ಲಾರು ಬಂಧು ಬಾಂಧವರೆ. ಇವಿಷ್ಟೂ ಮನೆಗಳು ಒಂದು ಕಡೆ ಅಗಲವಾದ ಕಿರು ರಸ್ತೆ ಮತ್ತೊಂದು ಕಡೆ ಸಣ್ಣದಾದ ನೀರಿನ ಹರಿವಿನಿಂದ ಬೇರ್ಪಟ್ಟಿದವು. ಹಾಗಾಗೀ ಇಲ್ಲಿಗೆ ಸಣ್ಣಕೇರಿ ಎಂಬ ಹೆಸರು ಬಂದಿತ್ತು. ಅಲ್ಲದೇ ಇಡೀ ಊರು ಸಣ್ಣದಾಗಿದ್ದರಿಂದ ಒಬ್ರ ಮನೆ ಕಥೆ ಇನ್ನೊಬ್ರಿಗೆ ಹೂಸು ವಾಸನೆ ಅಂತೆ ಹರಡುತ್ತಿತ್ತು .

ಅಷ್ಟು ಹೊತ್ತಿಗೆ ಅಂದಷ್ಟೇ ಬಾಂಬೆಯಿಂದ ಬಂದಿಳಿದು ಮಹಡಿ ಕೋಣೆಯಲ್ಲಿ ಮಲಗಿದ್ದ ನನ್ನ ಅಪ್ಪನ ತಂಗಿ, ಮಾಲತತ್ತೆ 'ಎಂತದೇ ನಿಂಗಳದ್ದು ಗಲಾಟಿ. ಯಾರಾದ್ರೂ ಸತ್ತ್ವ ಎಂಥಾದ್ದು' ಅನ್ನುತ್ತಾ ಕೆಳಗಿಳಿದರು. ಗಿರಿಜಕ್ಕ ಅವರೆಡೆಗೆ ನೋಡುತ್ತಾ 'ಶ್ರುತಿ ಸಾಯುಲೆ ಹೋಗಿತ್ತಡ. ಲವ್ ಕೇಸು. ಬೆಂಗಳೂರಲ್ಲಿ ಯಾವ್ದೋ ಮಾರ್ವಾಡಿ ಜತೆ ತಿರಗ್ತಿತ್ತಡ. ಹೊಟ್ಟೇಲಿ ಅವ್ನ ಪ್ರಸಾದ ಬೆಳೆತಿತ್ತು ಹೇಳಿ ಸುದ್ದಿ' ಅಂದರು. ಮಾಲತತ್ತೆ 'ಥೋ ಮಾರಾಯ್ತಿ. ಅದ್ರ ಅಕ್ಕ ಸೌಮ್ಯನೂ ಅಪ್ಪನ ಮನಿಗೆ ಬಂದು ಕೂತ್ಕಂಜಡ. ಹೌದಾ?' ಎಂದು ಕೇಳಿ ನನ್ನೆಡೆಗೆ ತಿರುಗಿ 'ಒಂದು ಚೂರು ಚಾ ತಾರೆ. ಹದಿನೆಂಟು ತಾಸು ಬಸ್ಸಲ್ಲಿ ಕೂತು ತಲೆ ನೋವ್ವು ಬಂಜು' ಅಂದರು. 'ಈಗ ನಂಗಳಲ್ಲೂ ಡೈವೋರ್ಸ್ ಜಾಸ್ತಿ ಆಜಡೆ . ಹುಡ್ಗನಿಗೆ ಹುಡ್ಗಿಗೆ ತಾಳಮೇಳನೇ ಸರಿ ಬತ್ತಿಲ್ಲೆ. ಗಂಡಂದೊಂದು ವಿಚಾರ ಆದ್ರೆ ಹೆಂಡ್ತಿ ತಲೇಲಿ ಇನ್ನೊಂದು ನಡೀತು . ಒಬ್ರಿಗೊಬ್ರು ಸಂಸಾರ ತೂಗಕಂಡು ಹೋಪುಲೆ ಆಯ್ತಿಲ್ಲೆ' ಅಂದ ಗಿರಿಜಕ್ಕ 'ನಂಗೂ ಚಾ ಮಾಡೇ' ಎಂದು ಕರ್ಕಶ ಧ್ವನಿಯಲ್ಲಿ ಕಿರುಚಿದರು.
ಅಲ್ಲಿಗೆ ಸೌಮ್ಯಳ ಕಥೆ ಮುಗಿದು ಇಡೀ ಮನುಕುಲದ ಬೈದಾಟ ಶುರುವಾಯಿತು.

ನಾನು ಚಾ ತಟ್ಟೆ ಹಿಡಿದುಕೊಂಡು ಹೊರ ಬರುವಾಗ 'ಮೊನ್ನೆ ಶ್ರೀದೇವಕ್ಕನ ಮಗಳು ಲಕ್ಷ್ಮೀ ಮದ್ವೆ ಹಿಂದಿನ ದಿವ್ಸ ತಂಗೆ ಈ ಮದಿ ಬೇಡ. ನಾ ಆಫೀಸಲ್ಲೇ ಒಬ್ನ ಇಷ್ಟಪಟ್ಟಿದ್ದೆ. ಮದ್ವೆ ಆದ್ರೆ ಅವ್ನೆಯ ಹೇಳಿ ರಾದ್ಧಾಂತ ಮಾಡಿ ಮನೆಯವಕ್ಕೋಕ್ಕೆಲ್ಲ ಹಾರ್ಟು ಫೇಲ್ ಆಗುದೊಂದು ಬಾಕಿ ಇತ್ತಡ. ಕೊನೆಗೆ ಶ್ರೀದೇವಕ್ಕನ ತಮ್ಮ ಎಲ್ಲರಿಗೂ ಫೋನ್ ಮಾಡಿ ಮದ್ವೆ ನಡೆತ್ತಿಲ್ಲೆ ಅಂದ. ಎಷ್ಟು ಖರ್ಚು, ಅವಮಾನ ದುಃಖ ಅಲ್ದಾ' ಎಂದು ಗಿರಿಜಕ್ಕ ಪಿಸುಗುಡುತ್ತಿದ್ದರು. ಅಮ್ಮ ನನ್ನ ಕಡೆ ನೋಡಿ 'ನೀ ಯಾರನ್ನು ಹುಡ್ಕಂಜಿಲ್ಲೆ ಅಲದನೆ. ಯಾರಾದ್ರೂ ಇದ್ರೆ ಇವತ್ತೇ ಹೇಳು. ನಾಳೆ ಗಂಡಿನ ಕಡೆಯವು ಬಂದಾಗ ಗೊತ್ತಾಪ್ಪುದು ಬೇಡ ' ಎಂದು ಮತ್ತೆ ತಮ್ಮ ವರಾತ ಪ್ರಾರಂಭಿಸಿದರು.
ಲಕ್ಷ್ಮೀ ನನ್ನ ಮ್ಯೂಚುಯಲ್ ಫ್ರೆಂಡ್ ಆದ್ದದ್ದರಿಂದ ಅವಳ ಮದುವೆ ಮುರಿದ ವಿಚಾರ ನನಗೆ ಮೊದಲೇ ಗೊತ್ತಿತ್ತು.
ಕೆಲವೊಮ್ಮೆ ಮಾಡರ್ನ್ ಯುಗದವರಾದ ನಾವು ತುಂಬಾ ಛೂಸಿ ಆಗಿಬಿಟ್ಟಿದೆವೇನೋ ಅನಿಸುತ್ತದೆ. ಇಂಜಿನಿಯರ್ ಬೇಕು. ಕೈತುಂಬಾ ಹಣ ಕಾರು ಮನೆ ಇರಬೇಕು. ಹುಡುಗ ಫಾರಿನ್ ಅಲ್ಲಿ ಇದ್ದಾನೆ ಅಂದರೆ ಮತ್ತಷ್ಟು ಖುಷಿ. ಹುಡುಗಿ ಬೆಳ್ಳಗೆ ತೆಳ್ಳಗೆ ಇರಬೇಕು. ಹಲ್ಲು ಮುಂದಿರಬಾರದು. ಕೂದಲು ಹೋಗಿ ತಲೆ ಬೋಳಿರಬಾರದು. ಕಣ್ಣು ಕಾಲು ಸರಿ ಇರಬೇಕು. ತುಂಬಾ ಫಾರ್ವಡ್ ಇದ್ದರೂ ಕಷ್ಟ ಅಥವಾ ಬೆಪ್ಪುತಕ್ಕಡಿ ತರಹ ಇದ್ದರೂ ಕಷ್ಟ. ಬರೇ ಹುಡುಗನ್ನೊಬ್ಬನೇ ಅಥವಾ ತಂದೆ ತಾಯಿಯೊಬ್ಬರೇ ಮಾತನಾಡಿದರೆ ಅದೊಂದು ರೀತಿಯ ಅಸಮಾಧಾನ. ಹೀಗೆ ನೂರಾಎಂಟು ನೆಪಗಳು.

ತಮ್ಮ ಚಾದ ಒಂದು ಗುಟುಕನ್ನು ಸರ್ರೆಂದು ಎಳೆದು ಮಾಲತತ್ತೆ 'ನಮ್ಮನಿ ಪ್ರಸಾದನ ಎರಡು ಫ್ರೆಂಡ್ಸಗಳ್ಳದ್ದು ಕೋರ್ಟಿಗೆ ಹೋಜಡ ವಿಷ್ಯ' ಅಂದರು. ಅಜ್ಜಿ 'ಹೌದನೇ ಎಂತಕ್ಕಡ' ಎಂದು ಕುತೂಹಲದಿಂದ ಕೇಳಿದಾಗ 'ಒಬ್ಬವನ ಹೆಂಡ್ತಿ ತಂಗೆ ಅಂವ ಹೊಡಿತಾ ಬಡಿತಾ. ಮೈಕೈಗೆ ಬರೇ ಹಾಕಿದ್ದಾ. ಕುಂತಲ್ಲಿ ನಿಂತಲ್ಲಿ ತನ್ನ ಪ್ರಶ್ನೆ ಮಾಡ್ತಾ. ಅತ್ತೇನು ತಂಗೆ ಯಾರೋ ಇದ್ದೋ ಹೇಳಿ ಹಳಿತರು. ತಂಗೆ ಇಬ್ರು ಸೇರಿ ತಲೆ ಕೆಡ್ಸಿದ್ದೋ. ತನ್ನ ಲೈಫು ಹಾಳಾತು ಇವ್ನ ಮದ್ವೆ ಆಗಿ ಹೇಳಿ ಕಂಪ್ಲೈನ್ಟ್ ಕೊಟ್ಟಿದ್ಲು. ಇನ್ನೊಬವ್ನ ಹೆಂಡ್ತಿ ರಾಶಿ ಕಲ್ತದ್ದು. ತಿಂಗಳಿಗೇ ಒಂದು ಲಕ್ಷ ಸಂಬಳ ಬತ್ತಡ ಅದ್ಕೆ. ತನ್ನ ಎಲ್ಲೂ ಕರ್ಕಂಡು ಹೋಗ್ತ್ನಿಲ್ಲೆ. ಬರೇ ಮನೆ ಮನೆ ಅಪ್ಪ ಅಮ್ಮನ ನೋಡ್ಕೋ ಹೇಳ್ತಾ ಹೇಳಿ ಸಿಟ್ಟಡ. ಅಬಾರ್ಷನ್ ಮಾಡ್ಕಂಜು ಹೇಳಿನೂ ಹೇಳ್ತಿದ್ದ.' ಅಂದು ವ್ಯಥಿಸಿದರು.
ಎಲ್ಲಾ ಕಾಲದಲ್ಲೂ ಈ ಗುದ್ದಾಟ ಇದ್ದದ್ದೇ ಆದರೂ ಅದು ಹೇಗೆ ಹಳಬರು ಸಂಭಾಳಿಸಿಕೊಂಡು, ಆಶೆ ಆಕಾಂಕ್ಷೆಗಳನ್ನು ಬದಿಗೊತ್ತಿ ಜೀವನ ಸಾಗಿಸಿದರು ಎಂದು ಆಶ್ಚರ್ಯವಾಗುತ್ತದೆ.

ಅಮ್ಮ ದಯನೀಯವಾಗಿ ನನ್ನೆಡೆ ಮತ್ತೆ ಕಣ್ಣು ಹಾಯಿಸಿದರು. ನಿಧಾನವಾಗಿ 'ಹುಡ್ಗ ಗಿಡಗಾ ಇದ್ರೆ ಹೇಳೇ. ನಾಳೆ ನಂಗೆ ಅಪ್ಪಂಗೆ ಬೇಜಾರಾಗಾಂಗೆ ಮಾಡ್ಡ. ಹಿಂದೂ ಜಾತಿಯವನಾದ್ರೆ ಮದ್ವೆ ಮಾಡ್ತಾ' ಅಂದರು. ಅಷ್ಟರಲ್ಲಿ ಅಜ್ಜಿ 'ಸುಮ್ನೆ ಬಿಡೆ ಅದ್ನ. ಮೊದ್ಲೇ ಸಣ್ಣ ಭಯ ಇರ್ತು. ನೀನು ಬೇರೆ ಅದ್ರ ತಲೆ ತಿಂತಾ ಇದ್ದೆ.' ಅಂದು ನಯವಾಗಿ ಗದರಿದರು. ಗಿರಿಜಕ್ಕ ಢರ್ ಎಂದು ತೇಗುತ್ತಾ 'ಎಲ್ಲಾ ಹೋಗಿ ಬೆಂಗ್ಳೂರು, ಪರದೇಶ ಸೇರ್ಕಂಡ್ಯ. ಅದ್ರ ಶೋಕಿ ಆಡಂಬರ ಒಣ ಪ್ರತಿಷ್ಠೆ ಎಲ್ಲಾರ ತಲೆಗೇರಿದ್ದು. ತಂಗೋ ಹೇಳ್ದಾಂಗೆ ಆಗವು. ಇಲ್ಲಾಂದ್ರೆ ತಂಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬಂತು. ತಂಗೊ ಯಾರ ಹಂಗಲ್ಲೂ ಇಪ್ಪೋವಲ್ಲ. ನಂಗಳ ದಾರಿ ನಂಗೋಕ್ಕೆ ಹೇಳಿ ನಡ್ಕತ್ತಾ ಇದ್ದೋ' ಅಂದು ನಿಟ್ಟುಸಿರು ಬಿಟ್ಟರು.
ಕೆಲವೊಂದು ನಿದರ್ಶನಗಳನ್ನೆಲ್ಲಾ ನೋಡಿದರೆ ಅವರ ಮಾತು ಅಕ್ಷರಷಃ ಸತ್ಯವೆನಿಸುತ್ತದೆ. ಕೆಲವೊಮ್ಮೆ ನಿರೀಕ್ಷೆಗಳು ಹೆಚ್ಚಾಗಿ ಗಂಡು ಹೆಣ್ಣು ಒಬ್ಬರಿಗ್ಗೊಬ್ಬರು ಹೊಂದಿಕೊಳ್ಳುವುದು ದುಸ್ತರವಾಗುತ್ತಿದೆ. ಮುಂದಿನ ದಿನಗಳ ಬಗ್ಗೆ ಆಲೋಚಿಸಿ ಒಂದು ಹೆಜ್ಜೆ ಹಿಂದೆ ಮುಂದೆ ನಡೆದರೆ ಎಲ್ಲಾ ರೀತಿಯಲ್ಲೂ ಒಳ್ಳೆಯದು ಅನ್ನಿಸುತ್ತದೆ.

ಆಗ ಮಾಲತತ್ತೆ 'ನಿಂಗಳ ಆದರ್ಶ ಸಿಂಗಾಪೂರದಲ್ಲಿ ಇದ್ರೂ ಒಂದು ಚೂರು ಘಮಂಡ್ ಇಲ್ಲ್ಯೆ . ಪಾಪದಂವ' ಎಂದು ಹೊಗಳಿದರೆ 'ನಿನ್ ಮಕ್ಕೋನು ಚೆನ್ನಾಗಿ ಸಂಸಾರ ಮಾಡ್ತಾ ಇದ್ದ ಬಿಡು. ಈಗಿನ ಕಾಲದ ಮಕ್ಕೋಕ್ಕೆ ಅಪ್ಪ ಅಮ್ಮ ಕುಂಡೆ ಹರ್ದು ದುಡ್ಡು ಮಾಡಿಟ್ಟದ್ದು ಬೇಡ. ಎಂತಕ್ಕೆ ಹಚ್ಕಳವು ಹೇಳಿ. ಅಂತಾದ್ರಲ್ಲಿ ನಿನ್ನ ಆಸ್ಟ್ರೇಲಿಯಾಕ್ಕೆ ಕರ್ಸ್ಕಂಡು ಎಲ್ಲಾ ಮಾಡಿದ್ನಲೇ ಗಣೇಶ' ಅಂದು ಗಿರಿಜಕ್ಕ ದ್ರಷ್ಟಿ ನಿವಾಳಿಸಿದರು.
ಇದು ಗೊಂದಲಕ್ಕೆ ಬೀಳುವ ಮಾತು. ಮಕ್ಕಳಿಗೆ ತಂದೆ ತಾಯಿ ತಮ್ಮಲ್ಲಿಗೆ ಬಂದರೆ ತಮ್ಮ ಕಷ್ಟ ತಪ್ಪುತ್ತದೆ ಎಂದೋ ಅಥವಾ ಇವರಿಗೆ ತಾನೂ ಹೊರದೇಶಕ್ಕೆ ಹೋಗಿ ಬಂದೆ ಎಂಬ ಹಮ್ಮುಬಿಮ್ಮೋ ಅಥವಾ ಹೋಗಲಾರದವರಿಗೆ ಎಲ್ಲಾರೂ ಪರದೇಶಕ್ಕೆ ಹೋಗುತ್ತಾರೆ ಎಂಬ ಸಣ್ಣ ಮಾತ್ಸರ್ಯವೋ ಗೊತ್ತಾಗುವುದಿಲ್ಲ.

ಅಮ್ಮ ಮಗದೊಮ್ಮೆ 'ನಂಗೇನೋ ಹೆದರಿಕೆ ಆಗ್ತಾ ಇದ್ದಪ್ಪಾ. ಆಗ್ಲಿಂದಲೂ ಕೇಳ್ತಾನೇ ಇದ್ದೆ. ರಂಜನಾ ಒಂದು ಚೂರು ತುಟಿಪಿಟಕ್ಕೆಂಜಾ ನೋಡು. ನಾಳೆ ಹುಡುಗ ಅದ್ನ ನೋಡುಲೆ ಬಪ್ಪಂವ. ಎಲ್ಲಾ ಒಪ್ಗೆ ಆದ್ರೆ ಸಾಕು. ಇದ್ಕು ಇಪ್ಪತ್ತೊಂಬತ್ತು ಆತು. ಆಟ ಅಲ್ಲ ಹೆಣ್ಮಕ್ಕಳ್ಳನ ಮನೇಲಿ ಮದೀ ಮಾಡ್ದೆ ಇಟಕಂಬುದು' ಎಂದು ದಗ್ಧರಾದರು.

ಗಿರಿಜಕ್ಕ 'ಹೌದಲೇ ನಾರಾಯಣ ಭಟ್ರ ಕಡೆಯವು ನಾಳೆ ಬೆಳಗ್ಗೆ ಬತ್ತೋ ಅಲ್ದಾ ನಮ್ ರಂಜು ನೋಡುಲೆ. ಹುಡುಗನ ಜಾತಕ ಗೀತಕ ಸರಿ ನೋಡಿಸಿರಲೇ. ಛಲೋ ಪಗಾರಿದ್ದ, ಮನೆ ಇದ್ದ, ಲೋನು ಎಂತಾದ್ರೂ ಇದ್ದ ಹೇಳಿ ಸುತ್ತಮುತ್ತ ವಿಚಾರಸಕಳಕ್ಕಾಗಿತ್ತು' ಅಂದು ಇನ್ನೊಂದು ಚೂರು ಭಯಪಡಿಸಿದರು. ಅಜ್ಜಿ 'ಎಷ್ಟು ಸಲ ಹೇಳ್ತ್ಯೇ. ಎಲ್ಲಾ ತಿಳಕಂಡು ಆಜು' ಹೇಳಿ ಅವರ ಬಾಯಿ ಮುಚ್ಚಿಸಿದರು. ಗಿರಿಜಕ್ಕ ಅದನ್ನ ತಾಗಿಸಿಕೊಳ್ಳದೆ 'ಸರಿ ನಾ ಹೊಂಟೇ. ತುಂಬಾ ಹೊತ್ತಾತು ಬೈಂದು' ಎಂದು ಎದ್ದು ಅಂಗಳಕ್ಕೆ ಬಂದು ಮತ್ತೆ ನಿಂತರು.
ಇಂಥಾ 'ಗಂಡು ನೋಡುವ ವೇಳೆ'ಯಲ್ಲಿ ಬಿಟ್ಟಿ ಉಪದೇಶಕೊಡುವವರು ತುಂಬಾ ಜನ ಸಿಗುತ್ತಾರೆ. ತಾವು ಜೀವನದಲ್ಲಿ ಅರೆದು ಕುಡಿದ ಸಿಹಿಕಹಿಗಳನ್ನೆಲ್ಲಾ ನಮಗೆ ಉಣಿಸಿ ಬಿಡುತ್ತಾರೆ. ಅಲ್ಲಿಯವರೆಗೆ ತಾವು ಆಡಿಕೊಂಡ ಮಾತುಗಳನ್ನ ಮರೆತು ವಿರೋಧಾಭಾಸ ತೋರಿ ಬಿಡುತ್ತಾರೆ.

ನಾವೆಲ್ಲಾ ಗಿರಿಜಕ್ಕನ ಅಂಗಳದಲ್ಲಿ ಕಳಿಸಲು ನಿಂತವರು, ಅವರು'ನಾಳೆ ತಿಂಡಿಗೆ ಅವಲಕ್ಕಿ ಶಿರಾನನೆ. ಸೀರೆ ಉಡುಸುಲೆ ಲಗೂನೆ ಬತ್ತೆ ಅಕ್ಕಾ' ಎಂದು ಹೇಳುವುದನ್ನ ಕೇಳಿ ಹ್ಞೂಗುಟ್ಟಿದೆವು. 'ಮದ್ವೆ ಆದ್ ಕೂಡ್ಲೆ ಮಕ್ಕೊ ಮಾಡ್ಕಳಿ. ಅಲ್ಲಿ ಇಲ್ಲಿ, ಇಡೀ ಜಗತ್ತೇ ಸುತ್ತದೋ. ಇನ್ನು ಸೆಟ್ಲ್ ಆಗುಲೆ ಟೈಮ್ ಬೇಕು. ಫ್ಯಾಮಿಲಿ ಪ್ಲಾನಿಂಗ್ ಮಾಡ್ತಾ ಇದ್ದೋ ಹೇಳಿ ಕಾಲ ಹರಣ ಮಾಡಡಿ' ಎಂದು ನನ್ನ ಮೈ ತಟ್ಟಿದರು.

ಅವರು ಆಕಡೆ ಹೋದಂತೆ ಅಜ್ಜಿ 'ರಂಜನಾ ನೀ ರಾಶ್ಶಿ ತಲೆ ಕೆಡಸ್ಕಳದ್ದೆ ಇರೆ. ಹೇಂಗೂ ಅನಿರುದ್ಧನ ಬೆಂಗಳೂರಲ್ಲಿ ನೋಡಿದ್ದೆ. ಮಾತಾಡ್ಸಿದ್ದೆ. ಒಬ್ರಿಗೊಬ್ರಿಗೆ ಇಷ್ಟ ಆಜಲೇ. ನಾಳೆದು ಹೇಂಗಿದ್ರು ಬರೇ ಕಾಟಾಚಾರಕ್ಕೆ. ಮದ್ವೆ ದಿನಾಂಕ ಗೊತ್ತು ಮಾಡ್ಸಕಂಬುಲೆ' ಅನ್ನುತ್ತಾ 'ಈ ಜಟ್ಟಂಗೆ ಒಂದಿಪ್ಪತ್ತು ಎಳನೀರು ಇಳ್ಸು ಹೇಳಿದಿದೆ. ನಾಳೆ ಅವ್ಕೋ ಕುಡಿಯೋದಿದ್ರೆ ಹೇಳಿ. ಎಲ್ಲಿ ಹೋಗಿ ಸತ್ತ್ ಜ್ನನಾ' ಎಂದು ಬಯ್ಯುತ್ತಾ ಮನೆ ಒಳಗಡೆ ಹೋದರು. ಅಮ್ಮ ಬಿಚ್ಚಿಟ್ಟ ಶೇಂಗಾ ಕಾಳುಗಳನ್ನ ಡಬ್ಬಿಯಲ್ಲಿ ತುಂಬುತ್ತಾ 'ಕಡೀಗೆ ಬತ್ತ ಮಜ್ಗಿ ಬೆಲ್ಲ ಕುಡಿಯುಲೆ...ನಾ ಹೇಳ್ತೆ. ಅತ್ಗೆ ಒಂದು ಚೂರು ರವೆ ಚೊಕ್ಕ ಮಾಡಿಕೊಡೆ' ಎಂದು ಹೇಳಿ ಮಾಲತತ್ತೆಯನ್ನು ಅಡಿಗೆ ಮನೆ ಕಡೆ ಕರೆದುಕೊಂಡು ಹೋದರು.

ಅಷ್ಟರಲ್ಲಿ ಸಂಜೆಗೆಂಪರೀ ಅಡಿಕೆ ತೋಟ ಹೊನ್ನಿನ ತೇರಿನಂತೆ ಕಾಣಿಸುತ್ತಿತ್ತು. ಅಲ್ಲಿನ ಮರಗಳಿಗೆ ಸ್ಪ್ರಿಂಕ್ಲರ್ ನಿಂದ ಬಿಟ್ಟ ನೀರು ಪನ್ನೀರ ಅಭಿಷೇಕ ಮಾಡಿದಂತೆ ತೋರುತಿತ್ತು. ಪಕ್ಕದ ಮನೆ ಗೌರಿ ಅಂಬಾ ಎಂದು ರಾಗವಾಗಿ ಹಾಡುತಿದ್ದಳು. ಅಪ್ಪ ಮಾವ ಇನ್ನೂ ಮನೆ ಕಡೆ ಬಂದಿರಲಿಲ್ಲ.
ನಾನೊಬ್ಬಳೇ ಹಜಾರದ ಕಂಬಕ್ಕೆ ಸಾಚಿ ಕುಳಿತು ಎದೆಯಲೊಂದು ತರಹದ ಅವ್ಯಕ್ತ ಖುಷಿ ಭಯ ತುಂಬಿದ ಭಾವನೆಗಳನ್ನು ಅದುಮಿಕ್ಕುತ್ತ ನಾಳಿನ ಬರವು ಮಾಡಿಕೊಳ್ಳಲು ಸಿದ್ಧತೆ ಮಾಡಹತ್ತಿದೆ.

- ಶಿಲ್ಪ ಶಾಸ್ತ್ರಿ

Saturday 4 August 2018

ಕ್ಷಮಾರ್ಪಣಾಮಸ್ತು!!

ಅದು ಎರಡು ಬೆಡ್ ರೂಮ್ ಇರುವ ಒಂದಸ್ತಿನ ಮನೆ. ಮೇಲಿನ ಕೋಣೆ ಮಕ್ಕಳಿಗೆ ಮತ್ತು ಕೆಳಗಡೆ ಗಂಡ ಹೆಂಡತಿಯ ವಾಸ. ಎದುರು ಬದುರು ಎರಡು
ಮೂರಂತಸ್ತಿನ ಮನೆಗಳಿದ್ದರೂ ಅವು ಒಂದಕ್ಕೊಂದು ತಾಗಿಕೊಂಡಿರಲಿಲ್ಲ. ಹಾಗಾಗಿ ಅವರ ಇವರ ಮನೆ ಜಗಳ, ಗಲಾಟೆ, ಆಗುಹೋಗುಗಳು ಒಬ್ಬರಿಗೊಬ್ಬರಿಗೆ ಕೇಳುವುದು ತುಂಬಾ ಕಮ್ಮಿ. ಅದಲ್ಲದೆ ಜನಜಂಗುಳಿಯಿಂದ ಗಿಜಿಗಿಜಿಗುಡುತ್ತಿರುವ ಈ ಊರಲ್ಲಿ ಎಲ್ಲರಿಗು ತಮ್ಮತಮ್ಮದೆ.

ಪ್ರಮೀಳಾ ಮತ್ತು ಗುರುಸ್ವಾಮಿ ಮದುವೆಯಾಗಿ ಅಂದಾಜು ಹದಿನೇಳು ಹದಿನೆಂಟು ವರುಷಗಳೇ ಆಗಿದ್ದವು. ದೊಡ್ಡಮಗ ನಿತೀಶ ಪ್ರಥಮ ಪಿ.ಯು.ಸಿ ಯಲ್ಲಿದ್ದರೆ ಕಿರಿಮಗ ನಟೇಶ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಪ್ರಮೀಳಾ ಅಷ್ಟೇನೂ ಕಲಿತವಳಲ್ಲ. ಅವಳ ಕಲಿಕೆಯೆಂದರೆ ನಾಲಕ್ಕನೇ ಕ್ಲಾಸ್ ನಾಪಾಸ್. ಗುರುಸ್ವಾಮಿ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸುಮಾರಾದ ಕೆಲಸವೊಂದನ್ನು ಹೊಂದಿದ್ದನು. ಅವನ ಸಂಬಳ ಮೂರು ಹೊತ್ತು ಎಲ್ಲರ ಹೊಟ್ಟೆ ತುಂಬಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲುತಿತ್ತು. ಮಕ್ಕಳು ತಮ್ಮತಮ್ಮ ಮಟ್ಟಿಗೆ ಕಲಿಕೆಯಲ್ಲಿ ಮುಂದಿದ್ದರು.

ಪ್ರಮೀಳಾ ವಿದ್ಯಾವಂತಳಲ್ಲದ್ದಿದ್ದರು ದಡ್ಡಿಯಲ್ಲ. ವ್ಯವಹಾರ ಜ್ಞಾನ, ಸಮಯಪ್ರಜ್ಞೆ, ಸುಮಾರಾಗಿ ತಿಳುವಳಿಕೆಯುಳ್ಳವಳು. ಅವಳು ನೆರೆಹೊರೆಯವರೊಂದಿಗೆ ಎಷ್ಟುಬೇಕೋ ಅಷ್ಟು, ಗಂಡ ಮಕ್ಕಳೊಂದಿಗೆ ಅವರಿಗೆ ಬೇಕಾದಂತೆ ಒಗ್ಗಿಕೊಂಡು, ಬಂಧು ಬಾಂಧವರೊಂದಿಗೆ ಘನತೆಗೆ ತಕ್ಕಂತೆ ನಡೆದುಕೊಂಡು ಹೋಗುತ್ತಿದ್ದಳು.
ಗುರುಸ್ವಾಮಿ ಬೆಳ್ಳಂಬೆಳಗ್ಗೆ ಆಫೀಸಿಗೆ ಹೋಗಿ ಒಂಭತ್ತು ತಾಸಿನ ಕೆಲಸ ಮುಗಿಸಿ ಮನೆಗೇನಾದರು ಸಾಮಾನು ಸರಂಜಾಮು ತೆಗೆದುಕೊಂಡು ನೇರವಾಗಿ ಮನೆಗೆ ಬರುತ್ತಿದ್ದನು. ಅವನಿಗೆ ಅಪರೂಪಕ್ಕೊಮ್ಮೆ ಸಿಗರೇಟು, ಎಲೆ ಅಡಿಕೆ ಹಾಕುವ ಚಟವಿತ್ತೇ ಹೊರತು ಬೇರಾವ ವ್ಯಸನವಿರಲಿಲ್ಲ.
ಅಥವಾ ಅಂತದ್ದೇನಾದರೂ ಇತ್ತೇ?

ಪ್ರಮೀಳಾ ಒಂದು ರಾತ್ರಿ ಎಂದಿನಂತೆ ದಿನದ ಕೆಲಸ ಮುಗಿಸಿ, ಮೊಸರಿಗೆ ಹೆಪ್ಪು ಹಾಕಿ, ಮರುದಿನಕ್ಕೆ ತರಕಾರಿ ಹೆಚ್ಚಿಟ್ಟು ಗಂಡನೊಂದಿಗೆ ತಾನು ಕೋಣೆ ಸೇರಿ ಮಲಗಲು ತಯಾರಿ ನಡೆಸಿದ್ದಳು. ಇದ್ದಕ್ಕಿದ್ದಂತೆ ಮನೆ ಬಾಗಿಲನ್ನು ಲಘುವಾಗಿ ಯಾರೋ ತಟ್ಟಿದಂತೆ ಕೇಳಿ ಗಂಡನೆಡೆಗೆ ತಿರುಗಿದಳು. ಅವನು ಅವಳೆಡೆ ನೋಡದೆ 'ಬಾಗಿಲು ತೆರೆದು ಅವರನ್ನು ಇಲ್ಲಿಗೆ ಕರೆದು ತಾ' ಅಂದಾಗ ಏನೋ ಒಂದು ತರಹದ ಭಯ ಮಿಶ್ರಿತ ಆಶ್ಚರ್ಯವಾಯಿತು. ಗಂಡ ಯಾರೋ ಬರುತ್ತಾರೆ ಎಂದು ತಿಳಿದಿದ್ದನೇ? ಇಷ್ಟು ಹೊತ್ತು ಎಚ್ಚರವಿದ್ದು ಅವರ ದಾರಿ ಕಾಯುತ್ತಿದ್ದನೇ??. ಸರಿ ಯಾರೆಂದು ನೋಡೋಣವೆಂದು ಬಾಗಿಲು ತೆರೆದರೆ ಎದುರಿಗೆ ತಲೆತುಂಬ ಸೆರಗು ಹೊದ್ದ ಸಾಧಾರಣ ಮೈಕಟ್ಟಿನ ಅಷ್ಟೇನೂ ಸುಂದರವಿರದ ಹೆಂಗಸೊಬ್ಬಳು ನಿಂತಿದ್ದಾಳೆ. ಪ್ರಮೀಳಾಳಿಗೆ ಅವಳ ಗುರುತು ಹತ್ತಲಿಲ್ಲ. ಸುತ್ತಮುತ್ತ ನೋಡಿದ ಹಾಗೂ ಇಲ್ಲವಲ್ಲ ಇವಳನ್ನ ಅಂದುಕೊಳ್ಳುತ್ತಿದಂತೆ ಗಂಡನ 'ಒಳಗಡೆ ಬಾ ' ಎಂದು ಕರೆವ ಧ್ವನಿ ಕೇಳಿಸಿತು . ಆ ಹೆಂಗಸು ಪಟಪಟನೆ ಮನೆಗೆ ನುಗ್ಗಿ ತನ್ನನ್ನು ಕೈಯಲ್ಲಿ ಅತ್ತ ಸರಿಸಿ ಒಳ ಹೋದ ಹಾಗೆ ಭಾಸವಾಯಿತು. ಈ ಅಪರಾತ್ರಿ ಹನ್ನೊಂದು ಘಂಟೆಯಲ್ಲಿ ಏನಿದು, ಏನು ನಡೀತಾ ಇದೆ ಎಂದು ಏನೊಂದು ಅರ್ಥವಾಗದೆ ಮನೆಯ ಹೊರಗಡೆ ಒಮ್ಮೆ ಕಣ್ಣು ಹಾಯಿಸಿ ಯಾರು ನೋಡುತ್ತಿಲ್ಲವೆಂದು ಖಾತ್ರಿಪಡಿಸಿಕೊಂಡು ಕದವನ್ನು ಮುಚ್ಚಿದಳು.

ನಿಧಾನಕ್ಕೆ ತಮ್ಮ ವಾಸಕೋಣೆಯ ಕಡೆ ನಡೆದು ಒಳ ನೋಡಿದರೆ ಗುರುಸ್ವಾಮಿ ಆ ಹೆಂಗಸಿನ ತೆಕ್ಕೆಯಲ್ಲಿ ಅವಳ ಸೆರಗು ಜಾರಿಸುತ್ತ ಮಲಗಿದ್ದ. ಪ್ರಮೀಳಾಳಿಗೆ ಮೈಯೆಲ್ಲ ಛಳ್ಳೆಂದು ನಡುಕ ಹುಟ್ಟಿತು. ಎದೆ ಬಡಿತ ಜೋರಾಯಿತು. ತಲೆಮೇಲೆ ದೊಡ್ಡದೊಂದು ಮರದ ದಿಮ್ಮಿ ಹೊಡೆದಂತಾಯಿತು. ಕಾಲ್ಕೆಳಗಿನ ಭೂಮಿ ಬಿರಿದಂತೆ ಅನಿಸಿತು. ಆಗಷ್ಟೇ ತಿಂದ ಊಟ ಜೀರ್ಣವಾಗದೆ ವಾಂತಿ ಬಂದಂತಾಯಿತು. ಸಿಟ್ಟು, ದುಃಖ ಎಲ್ಲಾ ಒಮ್ಮೆಲ್ಲೇ ಎದೆಯೊಳಗಿಂದ ಹೊರಚಿಮ್ಮಿದಂತಾಯಿತು. ಅವಳಿಗೆ ಪರಿಸ್ಥಿತಿ ಅರ್ಥವಾಗುವಷ್ಟರಲ್ಲಿ, ಗುರುಸ್ವಾಮಿ 'ಶ್!!!        ಏನೂ ಗಲಾಟೆ ಮಾಡದೆ ಪಕ್ಕದಲ್ಲಿ ಬಂದು ಸುಮ್ಮನೆ ಮಲಗಿಕೋ' ಎಂದು ತನ್ನ ಘನಂದಾರಿ ಕೆಲಸವನ್ನು ಮುಂದುವರೆಸಿದ.

ಅಯ್ಯೋ ಶಿವನೇ! ಇದೆಂತಾ ಕರ್ಮ. ನಾನ್ಯಾವ ಜನ್ಮದಲ್ಲಿ ಪಾಪ ಮಾಡಿದ್ದೆ. ನನ್ನನ್ನೀಗಲೇ ಸಾಯಿಸಿಬಿಡು. ನನ್ನಿಂದಿದನ್ನು ನೋಡಲಾಗುವುದಿಲ್ಲ ಎಂದು ಮನಮಡುವಾಗಿಸಿಕೊಂಡು ತನ್ನ ಮುಖ ಇನ್ನೊಂದು ದಿಕ್ಕಿಗೆ ಹಾಕಿ ಮಲಗಿದಳು. ಇದ್ದಕ್ಕಿದ್ದ ಹಾಗೆ ಮಕ್ಕಳು ಕೆಳಗಡೆ ಬಂದರೆ ಎಂದು ಹೆದರಿಕೆಯಾಯಿತು. ಈ ಹೆಂಗಸು ಮನೆ ಒಳಗಡೆ ಬಂದದನ್ನು ಬೇರೆಯಾರಾದರು ನೋಡಿದರೋ ಹೇಗೆ ಎಂಬ ವಿಚಾರ ಮನದಲ್ಲೆದ್ದಿತು . ಹಾಗೇನಾದರು ತನ್ನ ಕೇಳಿದರೆ ಮನೆಗೆಲಸದವಳೆನ್ನಲೆ ಅಥವಾ ತಂಗಿ ಎನ್ನಲೇ ಎಂದು ಮನಸಲ್ಲೇ ಮಂಡಿಗೆ ತಿಂದಳು. ಆದರೂ ಯಾರೀಕೆ? ಎಲ್ಲಿಂದ ಬಂದಳು?
ಇಂತಹ ತಡರಾತ್ರಿಯಲ್ಲಿ ಮನೆಯಲ್ಲಿ ಪರಹೆಂಗಸೇ?

ಬೆಳಗಿನ ಜಾವ ಐದು ಘಂಟೆಗೆ ಎಚ್ಚರವಾಗಿ ತಿರುಗಿ ನೋಡಿದರೆ ಗಂಡ ಜೋರಾಗಿ ಗೊರಕೆ ಹೊಡೆಯುತ್ತಿದ್ದ. ನನಗ್ಯಾವಾಗ ಕಣ್ಣು ಹತ್ತಿತು, ಆ ಹೆಂಗಸು ಯಾವಾಗ ಹೊರಹೋದಳು, ಬೆಡ್ ರೂಮ್ ಬಾಗಿಲು ಮುಚ್ಚಿತ್ತೋ ಇಲ್ಲವೋ ಎಂದು ಪ್ರಮೀಳಾಳಿಗೆ ಒಂದೂ ಅರಿಯದಾಯಿತು. ಗಂಡನ ಆಫೀಸು ಬಸ್ಸು ಬರಲು ಇನ್ನು ಒಂದೇ ತಾಸಿದೆ ಎಂದು ಗಡಿಬಿಡಿಯಿಂದ ಹಾಸಿಗೆ ಬಿಟ್ಟು ಎದ್ದಳು. ತಿಂಡಿ ತಯಾರಿಸುವಾಗ, ಗಂಡನಿಗೆ ಬಡಿಸುವಾಗ, ಮಕ್ಕಳ್ಳನ್ನೆಬ್ಬಿಸಿ ಶಾಲೆಗೆ ಕಳುಹಿಸುವಾಗ ತನಗೇನೋ ಗರಬಡಿದವಳಂತೆ ಯಾಂತ್ರಿಕವಾಗಿ ತಿರುಗುತ್ತಿದ್ದಳು. ಎಂದಿನಂತೆ ಆ ದಿನ ಕಳೆದು ರಾತ್ರಿಯಾಗುತ್ತಿದ್ದಂತೆ ವಾಸ್ತವಕ್ಕೆ ಬರ ಹತ್ತಿದಳು.
ಆ ಹೆಂಗಸು ಇಂದು ಕೂಡ ತಿರುಗಿ ಬರುವಳೇ?

ಸರಿಸುಮಾರು ಹತ್ತೂವರೆ ರಾತ್ರಿಗೆ ಮನೆಯ ಬಾಗಿಲು ಮತ್ತೆ ಮೆತ್ತಗೆ ಬಾರಿಸಿತು. ಪ್ರಮೀಳಾಳಿಗೆ ಬಾಯಿ ಒಣಗತೊಡಗಿತು. ಜೀವ ಅದುರತೊಡಗಿತು. ತಲೆ ಧಿಮ್ಮೆನ್ನತೊಡಗಿತು. ಇದರ ಮಧ್ಯೆ ಗಂಡ ಮತ್ತೆ ಆದೇಶ ಕೊಟ್ಟದ್ದು ಕೇಳಲೇ ಇಲ್ಲ . ಗುರುಸ್ವಾಮಿ ಮಗದೊಮ್ಮೆ ಜೋರಾಗಿ ಅವರನ್ನು ಒಳ ಕರೆ ಎಂದಾಗ ತಾನು ಅಚಾನಕ್ಕಾಗಿ ಹೊರಒಡಿ ಬಂದು ಮನೆ ಬಾಗಿಲು ತೆರೆದು ಅಲ್ಲಿ ನಿಂತ ಹೆಂಗಸನ್ನ ಸರಕ್ಕನೆ ಒಳಗೆಳೆದು ಬಾಗಿಲು ಹಾಕಿದಳು.

ಮೈಮೇಲಿನ ಆವೇಶ ಕಮ್ಮಿ ಆಗಿ ಪಕ್ಕದಲ್ಲಿದ್ದ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ನಿಂತಳು. ಗಂಡನ ಜೊತೆ ಜಗಳವಾಡಬೇಕೆ? ಆ ಹೆಂಗಸಿಗೆ ಬೈಯ್ಯಬೇಕೆ? ಜೋರಾಗಿ ಕೂಗಿ ಮಕ್ಕಳ್ಳನ್ನ ಕೆಳಗೆ ಕರೆಯಬೇಕೆ ಇಲ್ಲ ಎರಡು ಬೀದಿ ಆಚೆ ಇರುವ ಅಪ್ಪನ ಮನೆಗೆ ಓಡಬೇಕೇ? ಒಂದು ತೋಚದಾಯಿತು. ಅದೆಲ್ಲ ಏನೂ ಬೇಡ ಎಂದು ತಲೆ ಕೊಡಹಿ ತನ್ನ ಒಳನೋವನ್ನು ಹಾಗೆ ನುಂಗಿಕೊಂಡು ಬೆಡ್ ರೂಮ್ ಬಾಗಿಲನ್ನು ಇಂದು ತಾನೇ ಮುಚ್ಚಿದಳು .

ಗಟ್ಟಿಯಾಗಿ ಕಿವಿ ಕಣ್ಣು ಮುಚ್ಚಿದರೂ ಮನದಲ್ಲಿ ನೂರಾರು ಆಲೋಚನೆಗಳು ಪುಟಿದೇಳುತ್ತಿದ್ದವು. ತನ್ನನು ಪಕ್ಕದಲ್ಲೇ ಇರಿಸಿಕೊಳ್ಳಲ್ಲು ಇವರಿಗೆಷ್ಟು ಧೈರ್ಯ? ತಾನೇನು ಅಷ್ಟು ನಿಕೃಷ್ಟ ಪ್ರಾಣಿಯೇ? ಮಕ್ಕಳು ನೆರೆಕೆರೆಯವರು ನೋಡಿದರೆ ಎಂಬ ಒಂದು ಚೂರು ಹೆದರಿಕೆಯಿಲ್ಲವಲ್ಲ? ಇದು ಎಷ್ಟು ದಿವಸದಿಂದ ನಡೀತಾ ಇದೆ? ಈ ಚಟ ಇವರಿಗೆ ಯಾವಾಗ ಹತ್ತಿತು? ಇವಳ ಜೊತೆ ಎಷ್ಟು ದಿನದ ಸಂಬಂಧ? ಇವರ ಜೀವನದಲ್ಲಿ ಒಬ್ಬಳೇ ಇರುವಳೋ ಅಥವಾ?.

ಗಂಡಸರಿಗೆ ಕಾಮತೃಷೆ ಜಾಸ್ತಿ ಎಂದು ಕೇಳಿದ್ದೆ. ಆದರೆ ಅದೇ ನನ್ನ ಪಾಲಿಗೆ ಶತ್ರುವಾಗುತ್ತದೆ ಅಂದುಕೊಂಡಿರಲಿಲ್ಲ ಎಂದು ಮಮ್ಮಲ ಮರುಗಿದಳು. ಇವರಿಗೆ ನಾನೇನು ಕಮ್ಮಿ ಮಾಡಿದ್ದೆ? ನಾನು ಹಳಸಿದನೆ? ತಾನು ದಡ್ಡಿ ತನಗೇನು ತಿಳಿಯುವುದಿಲ್ಲ ತಾನು ಯಾರಿಗೂ ಹೇಳುವುದಿಲ್ಲ ಎಂಬ ಭಾವನೆಯೇ? ನಿಜವಾಗಿಯೂ ನನ್ನಿಂದೇನಾದರೂ ತಪ್ಪು ನಡೆದು ಬಿಟ್ಟಿದೆಯೇ? ನನ್ನನ್ನು ಹಳಿಯಲು ಇವರು ಕಂಡುಕೊಂಡ ರೀತಿಯೇ ಅಥವಾ ಸುಮ್ಮನೆ ಇದೊಂದು ಭಂಡ ಶೋಕಿಯೇ? ಒಂದು ತಿಳಿಯುತ್ತಿಲ್ಲವಲ್ಲ ಎಂದು ಕೊರಗಿದಳು.
ಇವಳ ತುಮುಲ, ಸಿಟ್ಟು, ಪೇಚಾಟ ಗುರುಸ್ವಾಮಿಗೆ ಅರ್ಥವಾಗುತ್ತಿದೆಯೇ?

ಹೀಗೆಲ್ಲ ಪ್ರಮೀಳಾಳ ಬಾಳಲ್ಲಿ ನಡೆದು ಹೋಯಿತು. ಅವಳು ಯಾರೊಬ್ಬರಲ್ಲೂ ತುಟಿಪಿಟಕ್ಕೆನ್ನಲಿಲ್ಲ. ಗಂಡನಲ್ಲಿ ಒಂದೂ ಪ್ರಶ್ನೆಯನ್ನು ಇದುವರೆಗೆ ಕೇಳಲಿಲ್ಲ. ಇದೀಗ ಸುಮಾರು ನಾಲ್ಕಾರು ವರುಷಗಳೇ ಕಳೆದಿವೆ. ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಹಾಸ್ಟೇಲು, ಪರದೇಶ ಸೇರಿದ್ದಾರೆ . ಗುರುಸ್ವಾಮಿ ಪರಸ್ತ್ರೀ ಸಹವಾಸವನ್ನು ದೈನಂದಿನ ಚಟುವಟಿಕೆಯಂತೆ ಮುಂದುವರೆಸಿದ್ದಾನೆ. ಆ ಹೆಂಗಸರಲ್ಲಿ ಬೇರೆ ಬೇರೆಯವರು ಬರುತ್ತಿದ್ದರು. ಒಬ್ಬಳೇ ದಿನಾ ಬರುತ್ತಿರಲಿಲ್ಲ ಅನ್ನುವುದೊಂದೇ ಸಮಾಧಾನ. ಬಂಧುಗಳನ್ನು ರಾತ್ರಿ ಅಷ್ಟಾಗಿ ಉಳಿಸಿಕೊಳ್ಳುತ್ತಿರಲಿಲ್ಲ. ಇವಳೂ ಎಲ್ಲೂ ಉಳಿಯುತ್ತಿರಲಿಲ್ಲ. ಗುರುಸ್ವಾಮಿ ಇದೆಲ್ಲ ಅರ್ಥವಾದರೂ ಅವಳನ್ನ ಕಡೆಗಣಿಸಿದ್ದಾನೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ, ಸಂಸಾರದಲ್ಲಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದಾನಲ್ಲ ಎಂಬುದಷ್ಟೇ ಅವಳಿಗೆ ತೃಪ್ತಿ.

ಪ್ರಮೀಳಾ ತನ್ನೆಲ್ಲ ಕಷ್ಟ ಕಾರ್ಪಣ್ಯ, ನೋವು, ಅವಮಾನ,    ದುಗುಡ ದುಮ್ಮಾನಗಳನ್ನ ತನ್ನ ಒಡಲಿಗೆ ಹಾಕಿಕೊಂಡಿದ್ದಾಳೆ. ಮೊದಮೊದಲಿಗೆ ದೇವರ ಒಡಲಲ್ಲಿ ಹಾಕಿ ಹರಕೆ ಹೊರುತ್ತಿದ್ದಳು. ಆದರೀಗೀಗ ಹರಕೆ ನೆರವೇರಿಸಲಾಗುವುದಿಲ್ಲ ಎಂದು ಮನಗಂಡು ಬರೇ ಜಪತಪಗಳಲ್ಲಿ ತಲ್ಲೀನಳಾಗಿ ಜೀವನ ಕಳೆಯುತ್ತಿದ್ದಾಳೆ.

Thursday 2 August 2018

ಕುದುರೆ ಸರದಾರ

ಬಿಳಿ ಕುದುರೆ ಏರಿ ಒಮ್ಮೆ ಬಂದುಬಿಡು ಸರದಾರ ಕಾಯುತಿರುವೆ ಮದರಂಗಿ ಹಚ್ಚಿ
ರೂಪು ರೇಷೆ ಹಮ್ಮು ಬಿಮ್ಮು ಎಲ್ಲಾ ತೊರೆದು
ತಪಸ್ಸು ಕುಳಿತಿರುವೆ ಪ್ರಣಯಿನಿಯಂತೆ

ನಿನ್ನೊಂದು ಕುಡಿನೋಟ ಸಾಕು
ಮೃದು ಹೃದಯ ಕಂಪಿಸಲು
ನಾನೆಲ್ಲಿ ದುಂಬಾಲು ಬಿದ್ದು ನಿನ್ನ ಬಿಸಿಯಪ್ಪುಗೆ
ಹಿತ ಬಯಸುವೆ ಎಂಬ ಹೆದರಿಕೆಯೇ?

ತಲೆಯಲ್ಲಿ ಬರಿಯ ಪ್ರೇಮಕಥೆ ಹೆಣೆಹೆಣೆದು
ನಿಷೆಯಲ್ಲಿ ಸುಂದರ ಹೊಂಗನಸು ಕಂಡು ಸಾಕಾಗಿದೆ
ಸಪ್ತಸೂಪ್ತ ಸಾಗರಗಳಾಚೆ ಕಾಡುಮೇಡು ಬಾನುಭುವಿ ತಿರುಗಿಸಲು
ಒಂದೊಮ್ಮೆ ನನ್ನ ಬಳಿ ಬಾರೆಯ?

ಹೊನ್ನು ಗಿನ್ನು ವಜ್ರ ಹವಳ ನಾ ಕೇಳುವವಳಲ್ಲ
ನಿನ್ನ ಹಿಡಿತವೇ ನನಗೊಪ್ಪಿಗೆ
ಮುತ್ತು ರತ್ನ  ನಿನ್ನ  ಬಂಗಾರದ ಗಿಳಿ ನಾನಾಗುವೆ
ದಾರಿ ತಪ್ಪದೆ ನನ್ನಲ್ಲಿಗೊಮ್ಮೆ ಬಂದುಬಿಡು ಕಿನ್ನರ !

ಪಯಣ

ಕಳೆದ ದಾರಿ ಹಳಿದ ದಾರಿ ಜರೆದ ದಾರಿ
ಮುನಿದ ದಾರಿ ತಿರುಗಿ ತಿರುಗಿ ನೋಡಲುಂಟೇ
ಅಯ್ಯೋ ಬೇಡವೆಂದಿತು ಮನ ಸುಮ್ಮನ್ನಿರು

ಸಾವಿರಾರು ಮಾತು ಹತ್ತಾರು ಕಥೆ ನೂರೆಂಟು ವಿಚಾರ 
ತುಮುಲ ತಿಮಿರ ತುಂಬಿದ ಈ ಜಡ ದೇಹ
ಮುಂದೊಮ್ಮೆ ಮಣ್ಣಾಗುದಲ್ಲವೇ ಅಣ್ಣತಮ್ಮ

ಮತ್ತೇಕೆ ಥಳಿತ ತಿವಿತ ಮತ್ತೇಕೆ ಮದ ಮಾತ್ಸರ್ಯ 
ಬೇಡೆಂದರೂ ಮನಸ್ಸಿಗೆ ಒಗ್ಗದಿದ್ದರು
ಅದು ಪಿತ್ತವಾಗಿ ಇಡೀ ಜೀವ ಹಣ್ಣು ಮಾಡಿಸಿದೆ

ಆದರೇನು ಅಲ್ಲೊಂದು ಸುಖದ ಸೆಲೆ ಅತೃಪ್ತ ಆಸೆ 
ಮರೀಚಿಕೆಯಂತೆ ಕರೆಯುತಿದೆಯಲ್ಲ
ಹಳೇದನ್ನು ಮರಿ ಇವತ್ತನ್ನ ಕಲಿ ನಾಳೆ ಒಳಿತೇ 
ಎಂದು ಅದರೆಡೆ ಪಯಣಿಸುತ್ತಿರುವೆ !

Wednesday 1 August 2018

She

"She"

Who is She? What defines her?
She stands for patience, hardworking, soft nature, motherly instinct, homemaker, equals goddess are all the definition we have been hearing since ages.
Well, in this male chauvinist society where this 'Wonder woman' is still been looked as one who satisfies above definition, it's time one has to introspect beyond that.
She is the one whose perseverance, dedication, thriving has got her lots of attention. She is the one who is defying. She is the one whose suggestions, decisions that are mattering. She is no more 'roti papad bhelna' types. She is strong enough to run the house, department or even an enterprise. She has grown in her own way, giving tough competition and making head and eyes turn towards her. She is matured in her thinking and good in convincing.
She fits in to any of the movie characters from vamps and tramps to supermoms and women warriors. She fits in 'who runs the World' of Beyonce. She fits the picture perfect.
She has found her way to self-discovery, befriend misfits, tough enough to take on baddest, left behind scars, withstanding dominance. She upends stereotypes and embodies empowerment. She is no more despicable. She has spread her wings beyond imagination. She has arisen.
And that's She.
                                     

Day dreaming

Up above sun is still beaming
Inside mango tree birds are chirping
Down paddy field cows are mooing
But, I am sitting here day dreaming

How I wish this that happens
How I wonder anything matters
It should have been just as simple
I am sitting here for you waiting

All you do is let it go
All I do is hope high
Sigh! It could have been better
Baby, 'm still sitting here 'n longing!